Please enable javascript. Karnataka Budget 2024: ಇಂದು (ಫೆ.16) ಬೆಳಗ್ಗೆ 10:15ಕ್ಕೆ ಸಿಎಂ ಸಿದ್ದರಾಮಯ್ಯ ದಾಖಲೆಯ 15ನೇ ಬಜೆಟ್‌ ಮಂಡನೆ - cm siddaramaiah to present karnataka budget 2024 on today 16 feb know details | The Economic Times Kannada

Karnataka Budget 2024: ಇಂದು (ಫೆ.16) ಬೆಳಗ್ಗೆ 10:15ಕ್ಕೆ ಸಿಎಂ ಸಿದ್ದರಾಮಯ್ಯ ದಾಖಲೆಯ 15ನೇ ಬಜೆಟ್‌ ಮಂಡನೆ

Edited by ಬಾನುಪ್ರಸಾದ ಕೆ ಎನ್‌ | The Economic Times Kannada | Updated: 16 Feb 2024, 6:54 am

Karnataka State Budget 2024-25 : ರಾಜ್ಯ ಕಾಂಗ್ರೆಸ್‌ ಸರ್ಕಾರ ತನ್ನ ಐದು ವರ್ಷದ ಅಧಿಕಾರಾವಧಿಯಲ್ಲಿ ತನ್ನ 2ನೇ ವರ್ಷದ ಬಜೆಟ್‌ ಮಂಡನೆಗೆ ಸಜ್ಜಾಗಿದೆ. ಹಣಕಾಸು ಸಚಿವರೂ ಆಗಿರುವ ಸಿಎಂ ಸಿದ್ದರಾಮಯ್ಯ ಅವರು ರಾಜಕೀಯ ಜೀವನದಲ್ಲಿ ಬರೋಬ್ಬರಿ 15ನೇ ಬಜೆಟ್‌ ಮಂಡನೆ ಮಾಡುತ್ತಿದ್ದಾರೆ. ಈ ಕುರಿತ ವಿವರ ಇಲ್ಲಿದೆ.

 
Karnataka budget 2024
ಬೆಂಗಳೂರು: ಮುಂಬರುವ 2024-25ನೇ ಆರ್ಥಿಕ ವರ್ಷದ ಆಯವ್ಯಯ ಶುಕ್ರವಾರ ಮಂಡನೆಯಾಗಲಿದೆ. ಹಣಕಾಸು ಖಾತೆ ಹೊಂದಿರುವ ಸಿಎಂ ಸಿದ್ದರಾಮಯ್ಯ ಅವರು 15ನೇ ಬಾರಿಗೆ ಮಂಡಿ ಸುತ್ತಿರುವ ದಾಖಲೆಯ ಬಜೆಟ್‌ನಲ್ಲಿ ಯಾವೆಲ್ಲಾ ಕ್ಷೇತ್ರಗಳಿಗೆ ಆದ್ಯತೆ ನೀಡಿ ಕರ್ನಾಟಕವನ್ನು ಪ್ರಗತಿ ಪಥದತ್ತ ಕೊಂಡೊಯ್ಯುವ ಕಸರತ್ತು ನಡೆಸಲಿದ್ದಾರೆ ಎನ್ನುವುದು ಸದ್ಯದ ಕುತೂಹಲ.
ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರಲು ಕೈಹಿಡಿದ ಗ್ಯಾರಂಟಿಗಳನ್ನು ಮೊದಲ ಅವಧಿಯಲ್ಲೇ ಜಾರಿಗೊಳಿಸಿರುವ ಸರ್ಕಾರ ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಮಂಡಿ ಸುತ್ತಿರುವ ಬಜೆಟ್‌ನಲ್ಲಿ ಮೂಲಸೌಕರ್ಯಕ್ಕೆ ಹೆಚ್ಚಿನ ಒತ್ತು ನೀಡುವ ನಿರೀಕ್ಷೆ ಇದೆ.

ಕಾಂಗ್ರೆಸ್‌ ಪ್ರತಿಪಾದಿಸಿಕೊಂಡು ಬಂದಿರುವ 'ಅಹಿಂದ' ವರ್ಗದ ಕಲ್ಯಾಣಕ್ಕೂ ಹೊಸ ಯೋಜನೆಗಳ ಘೋಷಣೆಯ ಸಾಧ್ಯತೆ ಇದೆ. ಸರ್ಕಾರ ಮೊದಲ 10 ತಿಂಗಳಲ್ಲಿ ಗ್ಯಾರಂಟಿ ಜಾರಿಗಷ್ಟೇ ಒತ್ತು ನೀಡಿದೆ ಎಂಬ ಭಾವನೆ ಜನರಲ್ಲಿದೆ. ಹಾಗಾಗಿ ಈ ಆಯವ್ಯಯದಲ್ಲಿ ಗ್ಯಾರಂಟಿ ಹೊರತಾಗಿ ದೊಡ್ಡ ಜನಸಮೂಹಕ್ಕೆ ನೆರವಾಗುವಂತಹ ಕಾರ್ಯಕ್ರಮಗಳನ್ನು ಪ್ರಕಟಿಸುವ ನಿರೀಕ್ಷೆಯೂ ಇದೆ.

ಕಣ್ಣಿಗೆ ಕಾಣು ವಂತಹ ಅಭಿವೃದ್ಧಿ ಕಾರ್ಯಗಳನ್ನು ಘೋಷಿಸಿ ಆ ಮೂಲಕ ಸರ್ಕಾರದ ಬಗ್ಗೆ ಸದಾಶಯ ಮೂಡಿಸುವಂತಹ ಪ್ರಯತ್ನ ನಡೆಯುವ ಸಾಧ್ಯತೆ ಇದೆ. ಜತೆಗೆ ಜಿಎಸ್‌ಟಿ ವೃದ್ಧಿ, ಸೇವಾ ವಲಯದ ಉತ್ತೇಜನಕ್ಕೆ ಪೂರಕವಾಗಿ ಹೊಸ ಕೈಗಾರಿಕಾ ಕಾರಿ ಡಾರ್‌ಗಳ ಘೋಷಣೆಯ ನಿರೀಕ್ಷೆಯೂ ಇದೆ. ಇತ್ತ ದೊಡ್ಡ ಜಿಲ್ಲೆಗಳಾದ ಬೆಳಗಾವಿ ಹಾಗೂ ತುಮಕೂರು ಜಿಲ್ಲೆಗಳನ್ನು ವಿಭಜಿಸಿ ಹೊಸ ಜಿಲ್ಲೆ ಘೋಷಣೆ ಮಾಡಬಹುದು ಎಂಬ ಚರ್ಚೆಗಳು ಕೇಳಿಬಂದಿವೆ.

ದಾಖಲೆ ಗಾತ್ರದ ಬಜೆಟ್‌ ಇದಾಗಲಿದೆ

ಪ್ರಸಕ್ತ 2023-24ನೇ ಸಾಲಿಗೆ 3.27 ಲಕ್ಷ ಕೋಟಿ ರೂ. ಗಾತ್ರದ ಬಜೆಟ್‌ ಮಂಡಿಸಿದ್ದ ಸಿದ್ದರಾಮಯ್ಯ ಅವರು 2024-25ನೇ ಸಾಲಿಗೆ 3.80 ಲಕ್ಷ ಕೋಟಿ ರೂ. ದಾಖಲೆ ಮೊತ್ತದ ಬಜೆಟ್‌ ಮಂಡನೆಗೆ ಸಜ್ಜಾಗಿದ್ದಾರೆ. ಹಾಗೆಯೇ ಈ ಬಾರಿಯೂ ಕೊರತೆ ಬಜೆಟ್‌ ಮಂಡಿಸುವ ಸಂಭವವಿದೆ. ಸಾಲ ಮೊತ್ತ ಕೂಡ 1 ಲಕ್ಷ ಕೋಟಿ ರೂ. ಮೀರುವ ಅಂದಾಜಿದೆ.

ಬೆಳಿಗ್ಗೆ 10.15ಕ್ಕೆ ಮಂಡನೆ

ಸಿಎಂ ಸಿದ್ದರಾಮಯ್ಯ ಅವರು ಶುಕ್ರವಾರ ರಾಹುಕಾಲ ಆರಂಭಕ್ಕೂ 15 ನಿಮಿಷ ಮುಂಚಿತವಾಗಿ ಅಂದರೆ, ಬೆಳಿಗ್ಗೆ ಸರಿಯಾಗಿ 10.15 ಬಜೆಟ್‌ ಪತ್ರ ಓದಲು ಆರಂಭಿಸಲಿದ್ದಾರೆ. ಗಾತ್ರದ ಅನುಗುಣವಾಗಿ ಒಂದು ಅಥವಾ ಎರಡು ಗಂಟೆಗಳ ಕಾಲ ಬಜೆಟ್‌ ಮಂಡನೆಯಾಗಲಿದೆ.

ಬಾನುಪ್ರಸಾದ ಕೆ ಎನ್‌ ಅವರ ಬಗ್ಗೆ
ಬಾನುಪ್ರಸಾದ ಕೆ ಎನ್‌
ಬಾನುಪ್ರಸಾದ ಕೆ ಎನ್‌ Senior Digital Content Producer
ದಿ ಎಕನಾಮಿಕ್‌ ಟೈಮ್ಸ್‌ ಕನ್ನಡ ವೆಬ್‌ನಲ್ಲಿ ಬ್ಯುಸಿನೆಸ್‌ ಪತ್ರಕರ್ತರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 2012ರಿಂದಲೂ ಪತ್ರಿಕೋದ್ಯಮದಲ್ಲಿ ಸಕ್ರಿಯರಾಗಿದ್ದಾರೆ. 2019ರ ಸೆಪ್ಟೆಂಬರ್‌ನಿಂದ ವಿಜಯ ಕರ್ನಾಟಕ ಆನ್‌ಲೈನ್‌ನಲ್ಲಿ ಪತ್ರಕರ್ತನಾಗಿ ಕೆಲಸ ಮಾಡಿದ ಅನುಭವ ಇವರಿಗಿದೆ. 2022ರ ಆಗಸ್ಟ್‌ನಿಂದ ಎಕನಾಮಿಕ್‌ ಟೈಮ್ಸ್‌ ಕನ್ನಡ ವೆಬ್‌ನಲ್ಲಿ ಪತ್ರಕರ್ತನಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮಾನವಾಸಕ್ತಿ ವಿಷಯಗಳು, ಕೃಷಿ, ಹಣಕಾಸು, ಆರ್ಥಿಕತೆ, ಪರ್ಸನಲ್ ಫೈನಾನ್ಸ್‌ ವಿಷಯಗಳಲ್ಲಿ ಇವರಿಗೆ ಹೆಚ್ಚಿನ ಪರಿಣತಿ ಇದೆ. ಪ್ರವಾಸ, ಚಾರಣ, ಸಾಹಿತ್ಯ ಓದು ಇವರ ಹವ್ಯಾಸಗಳು.Read More